ಅಕ್ಕಿ ಕಾಳಿನ ಮೇಲೆ ಹೆಸರು ಬರೆದಳೆ ಸೀತು...?!

ಉಣಗಲು ದಾಟಿ 5 ನಿಮಿಷ ನಡೆದುಕೊಂಡು ಹೋಗಬೇಕು ಅವನ ಅಜ್ಜನ ಮನೆ ತಲುಪಲು. ದಾರಿಯುದ್ದಕ್ಕೂ ಅರಳಿ ನಿಂತ ತರಾವರಿ ದಾಸವಾಳದ ಹೂಗಳು, ಅದರೊಂದಿಗೆ ಅಲ್ಲಿ ಅಲ್ಲಿ ಇರುವ ಗಂಧಸಾಲೆಯ ಪರಿಮಳ, ಹಕ್ಕಿಯ ಕೂಗು, ಅದರೊಂದಿಗೆ ಬರುವ ಬಾಲ್ಯದ ನೆನಪುಗಳು… ಇವನ್ನೆಲ್ಲ ಚಿಂತೆಗಳನ್ನು ಮರೆಸಿ ಮನೆ ತಲುಪುವಷ್ಟರಲ್ಲಿ ತುಸು ಸಮಾಧಾನ ಕೊಡುತ್ತಿತ್ತು.

ಮನೆಗೆ ಹೋದರೆ ಅಲ್ಲಿ ಈಗ ಇರುವುದು ಅವನ ಸೀತು ಮಾತ್ರ. ಅವನು ಆರು ತಿಂಗಳ ಮಗುವಾಗಿದ್ದಾಗಿನಿಂದ ಅವನನ್ನು ನೋಡಿಕೊಂಡ ದೂರದ ಅತ್ತೆಯೇ ಹೌದು. ಮನೆ ತಲುಪಿದ ಕೂಡಲೇ ಬಿಸಿ ನೀರಿನ ಸ್ನಾನ, 100 ವರ್ಷ ಹಳೆಯ ಈ ಬಚ್ಚಲು ಮನೆಯಲ್ಲಿ ಸದಾಕಾಲ ಬಿಸಿ ನೀರಿನಿಂದ ತುಂಬಿರುವ ಪಳಪಳ ಹೊಳೆಯುವ ಹಂಡೆ, ಮಂದ ಬೆಳಕು, ಮೈ ಒರೆಸಿಕೊಳ್ಳಲು ಅವನ ಸೀತು ಕೊಡುತ್ತಿದ್ದ ಪರಿಮಳದ ಬೈರಾಸು—ಇವೆಲ್ಲ ಕೊಡುತ್ತಿದ್ದ ಕುಶಿ, ತನ್ನ ಪೇಟೆಯ ಮನೆಯ ಆಧುನಿಕ ತಂತ್ರಜ್ಞಾನದ ಬಚ್ಚಲು ಮನೆ ಕೊಡಲು ಸಾಧ್ಯವಿಲ್ಲ ಎಂದು ಅವನಿಗೆ ಅನಿಸುತ್ತಿತ್ತು.

ಪ್ರತಿ 2/3 ತಿಂಗಳಿಗೊಮ್ಮೆ ಅಜ್ಜನ ಮನೆಗೆ ಬಂದು, ಅವನು ತೋಟದ ಕೆಲಸ ನೋಡಿಕೊಳ್ಳುತ್ತಿದ್ದ. ಪತ್ನಿ ಹಾಗೂ ಸೀತು ಹಲಸಿನ ಹಣ್ಣು ಕೊರೆದು, ಸೊಳೆಗಳನ್ನು ಬೇರ್ಪಡಿಸುವುದು, ಗೇರುಬೀಜ ಹುರಿಯುವುದು, ಪುನರ್ಪುಳಿ ಕೊಚ್ಚಿ ಬಿಸಿಲಿನಲ್ಲಿ ಒಣಗಿಸುವುದು, ಹಪ್ಪಳ, ಸಂಡಿಗೆ, ಬೆರಟ್ಟಿ, ಮಾಂಬ್ಳ, ಚಕ್ಕುಲಿ ಮುಂತಾದವುಗಳನ್ನು ಮಾಡುವುದು.

ಸೀತುವಿಗೆ ಇದೀಗ 70 ವರ್ಷ ಕಳೆದಿದೆ, ಆದರೆ ಇನ್ನೂ 40–45ರ ಹಾಗೆ ಕಾಣುತ್ತಾಳೆ. ಪ್ರಾಯಶಃ ಅವಳ ದೇಹಕ್ಕೆ ಮಾತ್ರ ವಯಸ್ಸು ಆಗಿದೆಯೋ ಏನೋ; ಸದಾ ನಗುತ್ತಾ, ಲವಲವಿಕೆಯಿಂದ ಇರುವ ಸೀತು ಜೀವನವನ್ನೂ, ತನಗೆ ಹೆಣೆದುಕೊಂಡಿರುವ ಪ್ರತಿ ಜೀವವನ್ನೂ ಅತ್ಯುತ್ತಮವಾಗಿ ಪ್ರೀತಿಸುತ್ತಾಳೆ. ತನ್ಮೂಲಕ ಮತ್ತೊಂದಿಷ್ಟು ಜೀವಿಗಳ ಸಂತಸಕ್ಕೂ ಕಾರಣಳಾಗಿದ್ದಾಳೆ.

ಆಕೆ ಉಪ್ಪು ಸೊಳೆ, ಬಾಳೆಕಾಯಿ, ಬಾಳೆ ಎಲೆ, ಮಾವಿನ ಹಣ್ಣು ಹೀಗೆ ಆಯಾ ತಿಂಗಳಲ್ಲಿ ಬೆಳೆಯುತ್ತಿದ್ದ ಹಣ್ಣು-ತರಕಾರಿಗಳನ್ನು, ವಿಶೇಷ ತಿನಿಸುಗಳನ್ನು ಚೆಂದವಾಗಿ ಕಟ್ಟಿ ಕೊಡುತ್ತಿದ್ದ ರೀತಿ ನಿಜಕ್ಕೂ ಮೆಚ್ಚುವಂತದ್ದು. ಇವುಗಳು ಕೇವಲ ಇವನ ಮನೆ ಮಾತ್ರವಲ್ಲ, ಮಹಾನಗರಿಯಲ್ಲಿರುವ ತಮ್ಮ ಸ್ನೇಹಿತರು, ಬಂಧುಗಳಿಗೂ ತಲುಪುತ್ತಿತ್ತು.

ಸೀತು ಅಂದಿನಿಂದ ಇಂದಿನವರೆಗೂ ಯಾವುದೇ ವಿಶೇಷ ಹಣ್ಣಿನ ಬಿತ್ತನ್ನು ಸಸಿ ಮಾಡಿ ಬೆಳೆಸುತ್ತಾಳೆ. ತುಳಸಿ, ಕಾಮಕಸ್ತೂರಿ, ಸೇವಂತಿಗೆ ಬೀಜಗಳನ್ನು ಒಣಗಿಸಿ ಪುಟ್ಟ ಪುಟ್ಟ ಡಬ್ಬಿಗಳಲ್ಲಿ ಹಾಕಿಡುತ್ತಾಳೆ. ಯಾರೇ ಕೇಳಿದರೂ ಅದನ್ನು ಕಟ್ಟಿ ಕೊಡುತ್ತಾಳೆ.

ಇದೀಗ 2 ತಿಂಗಳಿನಿಂದ ಅಜ್ಜನ ಮನೆಗೆ ಹೋಗಲು ಆಗಲಿಲ್ಲ. ಟಿವಿಯಲ್ಲಿ ತೋರಿಸುವ ವಾರ್ತಾ ಪ್ರಸಾರ ನೋಡಿದರೆ ಕೊರೊನಾ ಹಿಡಿಯದಿದ್ದರೂ ಹುಚ್ಚೇ ಹಿಡಿಯಬಹುದು! ಆದರೆ ಅವನಿಗೆ ಗೊತ್ತು—ಸೀತು ಓದುವುದು ವಾರ್ತಾಪತ್ರಿಕೆ, ನಂತರ ಒಂದಿಷ್ಟು ಪದಬಂಧ ಬಿಡಿಸಿ ತನ್ನ ಸಮಯದ ಸದ್ವಿನಿಯೋಗ ಮಾಡುತ್ತಾಳೆ.

ಇವನು ಮೊನ್ನೆ ಹೋದಾಗ ಮಡಲು ಗೀಸುತ್ತ, ಮೈಸೂರು ಮಲ್ಲಿಗೆ ಪದ್ಯ ಕೇಳುತ್ತಾ ಕುಳಿತಿದ್ದಳು. ಈ ವಯಸ್ಸಿನಲ್ಲೂ, ತನ್ನ ಸ್ವಂತದವರು ಯಾರು ಇಲ್ಲದಿದ್ದರೂ, ಜೀವನ ಬರೀ ನೋವನ್ನೇ ಕೊಟ್ಟರೂ, ಈಕೆ ಮಾತ್ರ ಕುಶಿಯನ್ನೇ ಹೆಕ್ಕುವಳು; ಹೆಕ್ಕಿ ಜೋಪಾನ ಮಾಡಿ ಮತ್ತೊಬ್ಬರಿಗೆ ಹಂಚುವಳು.

ಮಹಾನಗರಿಗೆ ಮರಳಿ ಸೀತು ಕೊಟ್ಟ ಹಣ್ಣು, ತರಕಾರಿ, ಹಪ್ಪಳ, ಗಂಧಸಾಲೆ ಅಕ್ಕಿ ಇವನ್ನೆಲ್ಲ ಬಾಟಾವಣೆ ಮಾಡಿ, ಅವರ WhatsApp status, Instagram Storiesಗಳಲ್ಲಿ ನಾನಾ ಬಗೆಯ ತಿಂಡಿ ತಿನಿಸು ಮಾಡಿದನ್ನು ಹಾಕಿದಾಗ, ಅವನ್ನೆಲ್ಲ ಸೀತು ನೋಡಿದರೆ ಅದೆಷ್ಟು ಸಂತೋಷ ಪಡುವಳೋ ಎಂಬುದನ್ನು ಗ್ರಹಿಸಿಯೇ ಇವನಿಗೆ ಮತ್ತಷ್ಟು ಸಮಾಧಾನವಾಯಿತು.

ನೆರೆಮನೆಯ ಮಾಣಿ ಊರಿಗೆ ಬಂದು 2 ತಿಂಗಳಿನಿಂದ ಮನೆಯಲ್ಲೇ ಕೂತು ಕೆಲಸ ಮಾಡುತ್ತಿದ್ದಾನೆ. ಈ ಮಾಣಿ ಹಾಲು ತೆಗೆದುಕೊಂಡು ಹೋಗಲು ಸೀತು ಮನೆಗೆ ಬಂದಾಗ, ಸೀತುವಿನ ಭಾವಚಿತ್ರ, ನಾನಾ ಬಗೆಯ ತಿನಿಸು, ಆಕೆಯ ಹೆಸರು ಬರೆದ ಪುಟ್ಟ ಬರಹಗಳು—ಈಕೆಗೆ ಗೊತ್ತೇ ಇರದ ಇಷ್ಟು ಜನ ಆಕೆಯ ಪ್ರೀತಿಯನ್ನು ಕೊಂಡಾಡಿದ್ದನ್ನು ತೋರಿಸಿದ.

“I couldn't go back to my village but Seethu brought the village to me.”
“Its Seethu who wrote our names on these rice grains.”
“I saw this fruit for the first time, it is as sweet as Seethu.”

ಇವನ್ನೆಲ್ಲ ತರ್ಜುಮೆ ಮಾಡಿ ಸೀತುಗೆ ಹೇಳಿದಾಗ, ಅವಳು ಕಣ್ಣರಳಿಸಿ, ಮೂಗಿನ ಮೇಲೆ ಕೈ ಇಟ್ಟು, ಸಣ್ಣದಾಗಿ ನಕ್ಕು “ಹೋಗ ಮಾಣಿ” ಎಂದು ಹೇಳಿ ಒಳ ಹೋಗುವಳು.

ನಾಲ್ಕೂವರೆ ಅಡಿಯ ಪುಟ್ಟ ಜೀವ ಸೀತುವಿನದ್ದು. ತೆರೆದ ಹೆಬ್ಬಾಗಿಲಲ್ಲಿ ನಿಂತ ಇವಳು ಯಾವುದೋ ಬಾದರಾಯಣ ಸಂಬಂಧವನ್ನು ಬೆಸೆಯಲು ನಿಂತ ಮಾಯ ಶಕ್ತಿಯ ಹಾಗೆ ಕಾಣುವಳು.




Comments

  1. Your writing style is really amazing. It just make us to visualise each n everything. I am a big fan for ur writings. 👌

    ReplyDelete
    Replies
    1. Thank you so much !! It means a lot♥️
      I will be happy to know from which source you read as I dunno who you are😊

      Delete
    2. I got link from your Instagram n I am one of Sudarshan's engineering classmate

      Delete
  2. Oh Happy to Know 😊 Yeah he told me ♥️🤗
    Thank you

    ReplyDelete

Post a Comment

Popular posts from this blog

My Everyday Magic: Puttu!!!!!

Between Stops...

Beakers, Bunsen, and a Bit of Chai...